ಬೆಂಗಳೂರು: ರಾಜ್ಯದಾದ್ಯಂತ ಬಿಪಿಎಲ್ (New BPL Ration Card) ರೇಷನ್ ಕಾರ್ಡ್ಗಳ ಪರಿಷ್ಕರಣೆ ಕಾರ್ಯಾಚರಣೆ (“ಆಪರೇಷನ್ ಬಿಪಿಎಲ್ ಕಾರ್ಡ್”) ತೀವ್ರಗತಿಯಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಇಲಾಖಾ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಅನರ್ಹರ ಕಾರ್ಡ್ಗಳನ್ನು ಗುರುತಿಸಿ ಎಪಿಎಲ್ಗೆ ಪರಿವರ್ತಿಸುವ ಮೂಲಕ ನಿಜವಾದ ಅರ್ಹ ಬಡವರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು.
ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಹೊಸ ಬಿಪಿಎಲ್ (BPL) ಕಾರ್ಡ್ಗಳಿಗೆ ಅರ್ಜಿ ಸ್ವೀಕಾರ ಮತ್ತು ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
13 ಲಕ್ಷ ಅನರ್ಹ ಕಾರ್ಡ್ಗಳ ಪತ್ತೆ:
ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 7.70 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳಿವೆ. ರಾಜ್ಯ ಸರ್ಕಾರ ನಡೆಸಿದ ಪರಿಶೀಲನೆಯಲ್ಲಿ ಒಟ್ಟು 13 ಲಕ್ಷ ಅನರ್ಹ ಕಾರ್ಡ್ಗಳು ಪತ್ತೆಯಾಗಿವೆ. “ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಪಟ್ಟಿ ಸಿದ್ಧವಾಗಲಿದೆ” ಎಂದು ಸಚಿವರು ವಿವರಿಸಿದರು.
ಸ್ವಯಂಪ್ರೇರಿತರಾಗಿ ಎಪಿಎಲ್ಗೆ ಬನ್ನಿ:
“ಸ್ವಂತ ಮನೆ ಕಟ್ಟಿದವರು, ಕಾರು ಹೊಂದಿದವರು, ಆರ್ಥಿಕವಾಗಿ ಸ್ಥಿರರಾಗಿರುವವರಿಗೆ ಬಿಪಿಎಲ್ ಕಾರ್ಡ್ ಅಗತ್ಯವಿಲ್ಲ. ಸ್ವಯಂಪ್ರೇರಿತರಾಗಿ ಬಿಪಿಎಲ್ನಿಂದ ಎಪಿಎಲ್ಗೆ ಬಂದು ನಿಜವಾದ ಬಡವರಿಗೆ ಯೋಜನೆಗಳ ಲಾಭ ತಲುಪಲು ಸಹಕರಿಸಬೇಕು” ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಅವರು ವಿನಂತಿಸಿದ್ದಾರೆ.
ರಾಜ್ಯದ ಬಿಪಿಎಲ್ ಕಾರ್ಡ್ಗಳ ಸ್ಥಿತಿ:
- ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್ಗಳು ಕಾರ್ಯನಿರ್ವಹಿಸುತ್ತಿವೆ.
- ಇದರಿಂದ ಸುಮಾರು 4.50 ಕೋಟಿ ಜನರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.
- ಪ್ರಸ್ತುತ ಶೇಕಡಾ 75 ರಷ್ಟು ಜನರು ಬಿಪಿಎಲ್ ವ್ಯಾಪ್ತಿಯಲ್ಲಿ ಒಳಗೊಳ್ಳುತ್ತಾರೆ.
“ಅನರ್ಹ ಕಾರ್ಡ್ಗಳನ್ನು ರದ್ದು ಮಾಡುವುದಲ್ಲ, ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡುವುದು ನಮ್ಮ ಗುರಿ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು
PM Kisan 21st Instalment 2025 Date: PM ಕಿಸಾನ್ 21 ನೇ ಕಂತಿನ ಹಣ ಯಾವಾಗ ಬಿಡುಗಡೆ..!





